ಸಿದ್ದಾಪುರ: ಸಮಾಜದ ಸಂಘಟನೆ ಪ್ರಬಲವಾಗಿದ್ದರೆ ಒಳ್ಳೆಯ ಕಾರ್ಯ ಮಾಡಲು ಸಾಧ್ಯ. ಸಂಘಟಕರು ಚೆನ್ನಾಗಿರಬೇಕಾದರೆ ನಿತ್ಯ ನಿರಂತರವಾಗಿ ಕಾರ್ಯಚಟುವಟಿಕೆ ನಡೆಸಲು ಸ್ವಂತ ಸ್ಥಳ ಅತ್ಯವಶ್ಯ. ಇದಕ್ಕೆ ಇಚ್ಚಾಶಕ್ತಿ ಬೇಕು ಎಂದು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.
ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ತಾಲೂಕು ಹವ್ಯಕ ಮಹಾಸಭೆ ಹವ್ಯಕ ಸಭಾಭವನ ನಿರ್ಮಾಣದ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಮಾಜಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಭಾಭವನದ ನಿರ್ಮಾಣಕ್ಕೆ ನಮ್ಮಿಂದಾದ ಸಹಾಯ ಸಹಕಾರ ನೀಡಬೇಕು. ಸಮಾಜಕ್ಕಾಗಿ ನಾವು ಹಣ ನೀಡಬೇಕು. ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಂಡವರನ್ನು ದೇವರು ಚೆನ್ನಾಗಿ ಇಡುತ್ತಾನೆ. ಎಲ್ಲ ಕಡೆ ಹವ್ಯಕ ಸಭಾಭವನ ನಿರ್ಮಾಣವಾಗಬೇಕು. ಆ ಮೂಲಕ ನಮ್ಮ ಸಮಾಜದ ಸಂಘಟನೆ ಆಗಬೇಕು. ನಮ್ಮ ಶಕ್ತಿ ಹೆಚ್ಚಿಸಿಕೊಳ್ಳಬೇಕು.
ಹವ್ಯಕರು ಲೋಕಕಲ್ಯಾಣಾರ್ಥವಾಗಿಯೇ ಇದ್ದವರು. ನಾವೆಲ್ಲರೂ ಒಟ್ಟಾಗಬೇಕು. ಹವ್ಯಕರಲ್ಲಿ ಶ್ರೇಷ್ಠತೆ ಇದೆ. ನಮ್ಮ ಸಮುದಾಯದ ಬಗ್ಗೆ ಎಲ್ಲ ಸಮಾಜದವರಿಗೆ ವಿಶ್ವಾಸ ಇದೆ. ದರಂತೆ ನಮಗೂ ಎಲ್ಲ ಸಮಾಜದವರ ಮೇಲೆ ವಿಶ್ವಾಸ ಇದೆ. ಸಿದ್ದಾಪುರದಲ್ಲಿ ನಿರ್ಮಾಣವಾಗಲಿರುವ ಹವ್ಯಕ ಸಭಾಭನವದಕ್ಕೆ ಹವ್ಯಕ ಮಹಾಸಭಾದಿಂದ 2 ಲಕ್ಷದ 21 ಸಾವಿರ ರೂ. ಗಳನ್ನು ಈಗಾಗಲೇ ನೀಡಲಾಗಿದೆ. ಕಟ್ಟಡ ನಿರ್ಮಾಣದಲ್ಲಿ ಹವ್ಯಕರೆಲ್ಲರೂ ಮುಂದಾಗಬೇಕು ಹಾಗೂ ತಮ್ಮನ್ನು ತೊಡಗಿಸಿಕೊಳ್ಳಬೇಕು .
ಹವ್ಯಕರನ್ನು ಅಪಹಾಸ್ಯ ಮಾಡುತ್ತಿರುವುದಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾವು ನಮ್ಮ ಕೆಲಸ ಮಾಡುತ್ತ ಹೋಗಬೇಕು. ಹಿಂದೆ ಹವ್ಯಕರು ಗಟ್ಟಿಯಾಗಿದ್ದರು. ಈಗಲೂ ಗಟ್ಟಿ ಇದ್ದಾರೆ. ಹವ್ಯಕರ ಶಕ್ತಿ ಇಡೀ ಜಗತ್ತಿಗೆ ತಿಳಿದಿದೆ. ಆನೆ ಹಾಗೆ ನಮ್ಮ ನಡೆ ಇರಬೇಕು. ಮುಂದಿನ ಪೀಳಿಗೆ ಗಟ್ಟೆಯಾಗಬೇಕಾದರೆ ಸಭಾಭವನ ಅತ್ಯವಶ್ಯ ಎಂದು ಹೇಳಿದರು.
ಹವ್ಯಕ ಮಹಾಸಭೆಯ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಪ್ರಾಸ್ತಾವಿಕ ಮಾತನಾಡಿ ತಾಲೂಕಿನಲ್ಲಿ ಹವ್ಯಕರಿಗೆ ಮೂಲಭೂತ ಸೌಕರ್ಯದ ಕೊರತೆ ಇದೆ. ಪಟ್ಟಣದ ಶಂಕರ ಮಠ ಹೊರತು ಪಡಿಸಿ ಸಭೆ ಸಮಾರಂಭಗಳನ್ನು ನಡೆಸಲು ವ್ಯವಸ್ಥಿತವಾದ ಸಭಾಭವನ ಇಲ್ಲವಾಗಿದೆ. ಆದ್ದರಿಂದ ಭವಿಷ್ಯದ ಹಿತದೃಷ್ಟಿಯಿಂದ ಪಟ್ಟಣದಲ್ಲಿ ಒಂದು ವ್ಯವಸ್ಥಿತವಾದ ಸಭಾಭವನ ನಿರ್ಮಾಣವಾಗಬೇಕು. ಹವ್ಯಕ ಸಮಾಜ ಎಲ್ಲ ಜನರೊಡನೆ ಉತ್ತಮ ಸಂಭದ ಇಟ್ಟು ಕೊಂಡಿದ್ದು, ನಿರ್ಮಾಣವಾಗುವ ಸಭಾಭವನ ಕೇವಲ ಹವ್ಯಕ ಸಮಾಜಕ್ಕೆ ಮಾತ್ರವಲ್ಲದೆ ಎಲ್ಲ ಸಮಾಜದವರಿಗೂ ಅನುಕೂಲ ಆಗಲಿ ಎಂಬ ಅಪೇಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಕೋಲಸಿರ್ಸಿ ಕ್ರಾಸ್ನಲ್ಲಿ 14ಗುಂಟೆ ಜಾಗ ನೋಡಲಾಗಿದೆ. ಇನ್ನು ಆರುಗುಂಟೆಯಷ್ಟು ಜಾಗದ ಅವಶ್ಯಕತೆ ಇದೆ. ಈ ಕುರಿತು ಮಾತುಕತೆ ನಡೆಸಲಾಗುತ್ತಿದೆ. ಇದಕ್ಕೆ ಸಮಾಜದ ಎಲ್ಲರ ಸಹಕಾರ ಅಗತ್ಯವಿದೆ. ಸಭಾ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 10ಲಕ್ಷ ರೂಗಳನ್ನು ದೇಣಿಗೆ ನೀಡಲು ತೀರ್ಮಾನಿಸಿದ್ದೇನೆ ಎಂದರು.
ರವಿ ಹೆಗಡೆ ಹೂವಿನಮನೆ ಮಾತನಾಡಿ ಸಮಾಜದಲ್ಲಿ ಹವ್ಯಕ ಸಮುದಾಯ ಎದ್ದು ನಿಲ್ಲುವ ಅಗತ್ಯವಿದೆ. ಹವ್ಯಕರು ಕೇವಲ ಮಾತಿನಲ್ಲಿ ಅಲ್ಲ ಕೃತಿಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ತೋರಿಸಬೇಕಾಗಿದೆ ಎಂದು ಹೇಳಿ ಸಭಾಭವನಕ್ಕೆ 10 ಲಕ್ಷ ರೂ. ಗಳನ್ನು ನೀಡುವುದಾಗಿ ತಿಳಿಸಿದರು.
ಉದ್ಯಮಿ ಪ್ರಕಾಶ ಹೆಗಡೆ ಮಾತನಾಡಿ ತಾಲೂಕಿನ ಅಡಕೆ ಬೆಳೆಗಾರರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂದಾಯವಾಗುತ್ತಿದೆ. ಆದರೆ ಹವ್ಯಕರಿಗೆ ಸರ್ಕಾರದಿಂದ ಸರಿಯಾಗಿ ಪರಿಹಾರ ಹಾಗೂ ಅಗತ್ಯ ಸಹಾಯ ಸಿಗುತ್ತಿಲ್ಲ. ಸಭಾಭವನ ನಿರ್ಮಾಣಕ್ಕೆ ಸಹಾಯ ನೀಡುವಂತೆ ಸರ್ಕಾರವನ್ನು ಆಗ್ರಹಿಸಬೇಕು ಎಂದು ಹೇಳಿ ಸಭಾಭನವನ ನಿರ್ಮಾಣಕ್ಕೆ 1ಲಕ್ಷದ 11ಸಾವಿರದ 115ರೂ ನೀಡುವುದಾಗಿ ತಿಳಿಸಿದರು.
ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ, ಪ್ರಮುಖರಾದ ಕೆ .ಎನ್ .ಶ್ರೀಧರ, ಕೃಷ್ಣಮೂರ್ತಿ ಭಟ್ಟ ಸಾರಂಗ, ಅಶೋಕ ಹೆಗಡೆ, ಎ. ಪಿ. ಭಟ್ಟ ಮುತ್ತಿಗೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಎಂ. ಜಿ. ರಾಮಚಂದ್ರ, ಪತ್ರಕರ್ತ ನಾಗರಾಜ ಮತ್ತಿಗಾರ ಇತರರಿದ್ದರು. ಜಿ.ಜಿ.ಹೆಗಡೆ ಬಾಳಗೋಡ, ಗಣೇಶ ಭಟ್ಟ ಕಾಜಿನಮನೆ ಕಾರ್ಯಕ್ರಮ ನಿರ್ವಹಿಸಿದರು.